top of page

ಜೀವ ಕಾರಣವ ಕೇಳಿ

ಜಿ.ಕೆ.ರವೀಂದ್ರಕುಮಾರ್


ಹರಸುವ ವಿಧಿಗೆ ಜೀವ ನೈವೇದ್ಯವ ಹಿಡಿದು ಅಲೆಯುವ ಸಾವು

ಕರೆಯುವ ವಿಧಿಗೆ ಅಮೃತದ ಬಟ್ಟಲು ಹಿಡಿದು ಸಮೆಯುವ ಜೀವ

ಸಾವ ಭಾಷೆ ಜೀವ ಭಾಷೆ ಎರಡೂ ಬೇರೆ ಬೇರೆ

ಎಂದು ಭಾವಗೊಳ್ಳುವ ವಿಶ್ವದಲ್ಲಿ ತೂಗಿಕೊಳ್ಳುವ ವೇಳೆ|


ಜಗಕಂಟುವ ಹೊಲಬಿಗೆ ಊರುವ ಪಾದ ಬೆಳೆಯುವ ಪಾದ

ಮಿಡಿವುದೇನು ತಡೆವುದೇನು ತಲೆಯೊಡ್ಡುವ ತಾಪಿ

ನಲಿವ ಮೀರಿ ಮುಗಿಲ ಮೀರಿ ಬಲಿಗೊಂಡ ಅಮೃತ

ಲೋಕೋತ್ತರದ ಗಮಲಿಗೆ ಪಾಪ ಪುಣ್ಯದ ಸಾಲು|


ಸಾವು ಬಾಳುವುದೇ ಉಸಿರ ಮೌನದ ಅಂಚಿನಲ್ಲಿ

ಬಾಳು ಅರಳುವುದೇ ಸಪ್ಪಳದ ಲಯದಲ್ಲಿ

ಇಂಗಿಕೊಳ್ಳುವ ಶಬ್ದದಲ್ಲಿ ಚೆಲ್ಲಿಕೊಳ್ಳುವ ಅರ್ಥ

ಮಳೆಬಿಲ್ಲೋ ಬಿಸಿಲ ಬಿಲ್ಲೋ ಹೂಡಲಾಗದ ಸತ್ಯ|


ಹೆಸರಿಲ್ಲದ ಬೀಜಕ್ಕೆ ಯಾವ ತಾಯಿಯ ಹಾಡು

ಶರಣೆನ್ನುವ ಕಾಡಿನಲ್ಲಿ ಎಷ್ಟು ಸಾವಿರ ತೊಟ್ಟಿಲು

ಹೆಸರಿಲ್ಲದ ಉಸಿರಿಗೆ ಯಾವ ಜೀವದ ಬೆರಳು

ಶರಣೆನ್ನದ ಊರಿನಲ್ಲಿ ಗತಿ ತಡವಿದ ಜಾಡು|


ಅರಳಿಕೊಳ್ಳುವ ಕಣ್ಣು ಮುಚ್ಚಿಕೊಳ್ಳುವ ಕಣ್ಣು

ಯಾವ ಮಾಯೆಯ ಜಾಡಿನಲ್ಲಿ ರೆಪ್ಪೆಗೊಂಡವೋ ಅವು

ತೆರೆವ ಜೀಕು ತೊಡೆವ ಜೀಕು ಮೀಟಿಕೊಂಡಿದೆ ಧರೆಯು

ನೆರಳು ಬೆಳಕಿನ ಹೊಂಚಿನಲ್ಲಿ ಪೊರೆದುಕೊಳ್ಳುವ ತಾವು |


ಜೀವ ಕಾರಣವ ಕೇಳಿ ಹಿಂದೆ ಅಲೆಯುವ ಸಾವು

ಸಾವ ಕಾರಣವ ಹೇಳಿ ಮುಂದೆ ದಾರಿ ತಪ್ಪುವ ಜೀವ

ಒದಗಿ ಬರುವುದೇ ದೈವಕ್ಕೆ ಕಲ್ಲು ಕರಗುವ ಸಮಯ

ಕಾಲ ಕರ್ಮದ ಕಾವಲಿಗೆ ಎದೆ ಹೂವಾಗುವ ಸಮಯ |


- ಜಿ.ಕೆ. ರವೀಂದ್ರಕುಮಾರ್

 
 
 

Recent Posts

See All

ಚೂರು ಪಾರು ಚರಿತೆ

ಎಷ್ಟೇ  ಬಳಿ ಬಳಿದು ನೆಕ್ಕಿದರೂ ಅಷ್ಟಿಷ್ಟು ಉಳಿಯುವ ಸಾರು ತಟ್ಟೆಯಲ್ಲಿ ಎಷ್ಟೇ ಎಳೆದೆಳೆದು ಚೀಪಿದರೂ ಚೂರು ಪಾರು ಬೆರಳಿನಲ್ಲಿ ನಾಕಾರು ಇರುವೆಗಳಿಗೆ ವಾರಕ್ಕಾಗುವಷ್ಟು...

ಮರವನಪ್ಪಿದ ಬಳ್ಳಿ

ಮರವನಪ್ಪಿದ ಬಳ್ಳಿಯನ್ನುಯನ್ನು ಮರವೇ ಅಪ್ಪಿರಬಹುದು ಹಾಗೂ ಇರಬಹುದು ಹೀಗೂ ಇರಬಹುದು ಭಾಷೆಯಿಲ್ಲದ ಜೀವಗಳು ದಾವೆ ಹೂಡಲಾರವು   ಎದೆ ಕೊರಳು ಗಲ್ಲ, ಬೆನ್ನು ಆತುಕೊಳ್ಳುವ...

ಹಾಕಿ ಹಾಕಿ

ಒಂದು   ಹಾಲಲ್ಲಾದರೂ ಹಾಕಿ ನೀರಲ್ಲಾದರೂ ಹಾಕಿ ಮೊದಲು ಒಂದು ಗೋಲು ಹಾಕಿ   ಆಗ ಹೀಗಿರಲಿಲ್ಲ ಧ್ಯಾನವಿದ್ದ ಕಾಲದಲ್ಲಿ ಚಂದ್ರ ನಗುತ್ತಲೇ ಇದ್ದ   ಚಂದ್ರ ನಗದಿದ್ದರೇನು...

Comments


©2021 by G K RAVEENDRAKUMAR. Proudly created with Wix.com

bottom of page