top of page

ಸಾವಯವ ಸುಪಾರಿ

ಜಿ.ಕೆ.ರವೀಂದ್ರಕುಮಾರ್

Updated: Jun 25, 2024



ಕೊಲ್ಲಲು ದುಡ್ಡು ಕೊಟ್ಟರೆ ಸುಪಾರಿ

ಕೊಲ್ಲುವ ಕಥೆಗೆ ದುಡ್ಡು ಕೊಟ್ಟರೆ ಪ್ರಾಯೋಜನೆ

ಕಥೆ ನೋಡಿ ಸುಮ್ಮನಿದ್ದರೆ ಮನರಂಜನೆ

ಕೊಲ್ಲಲು ತೀರ್ಮಾನಿಸಿದರೆ ಅಪರಾಧ


ಇಂಥ ಕೆಲಸ ಮಾಡುವಾಗ ಮನಸ್ಸಿನೊಳಗೆ

ಸುಪಾರಿಯೂ ಪ್ರಾಯೋಜನೆಯೂ ಒಂದರೊಳಗೊಂದು ಸೇರಿ

ನಾನು ಅದೇ ಆಗಿರಲಿಕ್ಕಿಲ್ಲ ಎಂದು ಸಮಾಧಾನ ಪಟ್ಟುಕೊಳ್ಳುವಲ್ಲಿ


ಒಳ್ಳೆಯವನಾಗಿದ್ದವನು ಒಳ್ಳೆಯವನಾಗೇ ಉಳಿಯುವ

ಅಚಲ ನಿಷ್ಠೆ ಕಠಿಣ ತಪಸ್ಸು ಕೆಡಿಸುವಂತೆ

ಸದಾ ನುಗ್ಗುವ ಬ್ರೇಕಿಂಗ್ ನ್ಯೂಸ್

ಹತ್ಯೆ ಹಾದರ ವಂಚನೆ ನೋಡುತ್ತ ಕೇಳುತ್ತಲೂ

ಒಳ್ಳೆಯವನಾಗಿರುವುದೆಂದರೆ ಸುಲಭದ ಮಾತಲ್ಲ


ಇತ್ತೀಚೆಗೆ ಅಹಿಂಸೆ ತಲೆಯೆತ್ತಿ ಮಾತನಾಡುತ್ತಿಲ್ಲ

ಸುಮ್ಮನಿದ್ದರೂ ಏನೊ ಬೇಗುದಿ ಯಾಕೋ

ಮಗ್ಗುಲು ಮುರಿಯುವ ಬಯಕೆ ಬೇಡವೆಂದರೂ

ಬಾಯಿ ಬಿಟ್ಟರೆ ಮಾನನಷ್ಟ ಬಿಡದಿದ್ದರೆ ಮಾನವಂತ

ಹೋಗಿ ಬೆನ್ನು ತಟ್ಟಿ ಬಂದರೆ ಹಾರ್ದಿಕತೆ

ಕೂತೇ ಲೈಕ್ ಮಾಡಿದರೆ ಯಾವುದೋ ಸೆಕ್ಷನ್ನು

ಯೋಗ್ಯರೋ ಅಯೋಗ್ಯರೋ

ಮುಖಕ್ಕೆ ಮಸಿ ಬೀಳುವವರೆಗೆ ಎಲ್ಲರೂ ತತ್ತ್ವಮಸಿಯೇ


ಸಂತೆಯಲ್ಲಿ ಜವಾರಿ ಕೊತ್ತುಂಬರಿ ಸಾವಯವ ತರಕಾರಿ

ಕೊಂಡು ಮನೆಗೆ ಹೋಗುವಾಗ

ಹೀಗೆ ಏನೇನೋ ಆಲೋಚನೆ

ಸಧ್ಯ ನಾನೂ ಜವಾರಿ ಸಾವಯವ

ಇಚ್ಚಿತ ಇಳುವರಿಯ ಕಳ್ಳು ಬಳ್ಳಿ

ಅಲ್ಲಿ ಇಲ್ಲಿ ದಾರಿಮಾಡಿಕೊಂಡು ಹಬ್ಬಿ

ಹೀಗೇ ತಿನ್ನುವ ಮೊದಲು ಸ್ವಲ್ಪ ಸಾಧಕ ಬಾಧಕ ಚಿಂತನೆ

ತುಪ್ಪ ತಟ್ಟೆಗೆ ಬೀಳುವುದೇ ತಡ..


ಇರಲಿ ಯಾಕೆ ಅದೂ ಇದೂ

ಊಟ ಆಯಿತಲ್ಲ ಬಿಡಿ

ಈಗೇನಿದ್ದರೂ ಪಾನು ಸುಪಾರಿ

ಇನ್ನು ನೀವು ಯಾರೋ ನಾವು ಯಾರೋ

ಮುಂದೆ ಅಗತ್ಯ ಬಿದ್ದರೆ ಹೇಗೂ

ನಿಮ್ಮ ಹೆಸರು ನಮ್ಮ ಮನದಲ್ಲಿದೆ

ನಮ್ಮ ಹೆಸರು ನಿಮ್ಮ ಮನದಲ್ಲಿದೆ

ಚಿಂತೆ ಯಾಕೆ ಎಲ್ಲವೂ ತೆರೆದ ಅಂಚೆ


-ಜಿ.ಕೆ. ರವೀಂದ್ರಕುಮಾರ್


 
 
 

Recent Posts

See All

ಚೂರು ಪಾರು ಚರಿತೆ

ಎಷ್ಟೇ  ಬಳಿ ಬಳಿದು ನೆಕ್ಕಿದರೂ ಅಷ್ಟಿಷ್ಟು ಉಳಿಯುವ ಸಾರು ತಟ್ಟೆಯಲ್ಲಿ ಎಷ್ಟೇ ಎಳೆದೆಳೆದು ಚೀಪಿದರೂ ಚೂರು ಪಾರು ಬೆರಳಿನಲ್ಲಿ ನಾಕಾರು ಇರುವೆಗಳಿಗೆ ವಾರಕ್ಕಾಗುವಷ್ಟು...

ಮರವನಪ್ಪಿದ ಬಳ್ಳಿ

ಮರವನಪ್ಪಿದ ಬಳ್ಳಿಯನ್ನುಯನ್ನು ಮರವೇ ಅಪ್ಪಿರಬಹುದು ಹಾಗೂ ಇರಬಹುದು ಹೀಗೂ ಇರಬಹುದು ಭಾಷೆಯಿಲ್ಲದ ಜೀವಗಳು ದಾವೆ ಹೂಡಲಾರವು   ಎದೆ ಕೊರಳು ಗಲ್ಲ, ಬೆನ್ನು ಆತುಕೊಳ್ಳುವ...

ಹಾಕಿ ಹಾಕಿ

ಒಂದು   ಹಾಲಲ್ಲಾದರೂ ಹಾಕಿ ನೀರಲ್ಲಾದರೂ ಹಾಕಿ ಮೊದಲು ಒಂದು ಗೋಲು ಹಾಕಿ   ಆಗ ಹೀಗಿರಲಿಲ್ಲ ಧ್ಯಾನವಿದ್ದ ಕಾಲದಲ್ಲಿ ಚಂದ್ರ ನಗುತ್ತಲೇ ಇದ್ದ   ಚಂದ್ರ ನಗದಿದ್ದರೇನು...

Comments


©2021 by G K RAVEENDRAKUMAR. Proudly created with Wix.com

bottom of page