top of page
Search

ಮರವನಪ್ಪಿದ ಬಳ್ಳಿ

  • ಜಿ.ಕೆ.ರವೀಂದ್ರಕುಮಾರ್
  • Oct 9, 2024
  • 1 min read

 

ಮರವನಪ್ಪಿದ ಬಳ್ಳಿಯನ್ನುಯನ್ನು ಮರವೇ ಅಪ್ಪಿರಬಹುದು

ಹಾಗೂ ಇರಬಹುದು ಹೀಗೂ ಇರಬಹುದು

ಭಾಷೆಯಿಲ್ಲದ ಜೀವಗಳು ದಾವೆ ಹೂಡಲಾರವು

 

ಎದೆ ಕೊರಳು ಗಲ್ಲ, ಬೆನ್ನು ಆತುಕೊಳ್ಳುವ ಬಳ್ಳಿಗೆ

ಪುಳಕ ಗಮ್ಯದ ಖುಷಿ ಮರದ ಹೊಕ್ಕಳಿಗೂ

ತಬ್ಬಲಾಗದ ಬಾಗಲಾಗದ ಯಾತನೆಯ ನಡುವೆಯೂ

 

ಬಂಡೆಗಳ ಎದೆ ಬಗೆದವರು ಯಾರು ಪ್ರೀತಿಯಿಲ್ಲದ ಮೇಲೆ

ಎಂದು ತಿಳಿದ ಮೇಲೆ ಅದರ ಜೀವ ಜಲ ಯಾರಿಗೆ

ಎರುವ ಕಥೆಯಲ್ಲಿ ಇಲ್ಲದ ಕಥೆಯೂ ಅದರ ಪಾಡಿಗೆ

 

ಎಸೆದ ಡಬ್ಬವೂ ಹೇಳುತ್ತಿರಬಹುದು ವಿರಃಅ ನನ್ನನೇ ನೆನೆದು

ತಗೋ ಎಂದು ಕರೆದರೂ ಬಿಟ್ಟು ಬಂದ ಹೂವು ಗಿಡದಿ ಅಳುತಿರಲು

ಯಾವ ಮಗುವಿಗೆ ಕಾದು ನಿಟಿಕೆ ಮುರಿವುದೋ ಅಂಗಡಿಯ ಗೇಟು

 

ಬಡಿಸಿಟ್ಟ ಎಲೆ ಪಂಕ್ತಿಯಲ್ಲಿ ಯಾವ ಎಲೆ ನನ್ನದೋ

ಅಲ್ಲಿ ಇಲ್ಲಿ ಎನಿಸಿ ಕೂರುವಲ್ಲಿ ಅರಳುವುದೇ ಎಲೆಯ ಖುಷಿಯು

ನನ್ನ ಹೆಸರು ಬರೆದು ಕಾಯುವುದಂತೆ ಅಗುಳು ಹೇಳಿದವನು ಎಲ್ಲೋ

 

ಎಂದು ಕೂತ ಜಾಗವೂ ಮತ್ತೇಕೆ ಸೆಳೆಯುವುದು ನನ್ನ ನಾಳೆಯೂ

ಬಿಡುವ ಮನೆಯ ಗೋಡೆ ತಡವುವಲ್ಲಿ ಸೋತವೇ ಮಾತುಗಳು

ಇಂಥ ಭಾವಗಳ ಹೀರಿ ಹನಿಯುವುದೇ ಮುಗಿಲ ಮಮತೆಯ ನೀರು

 

ನೆಂದವರು ನೆನೆಯದವರು ಎಲ್ಲರೂ ಸುತ್ತುವರು ತಮ್ಮದೇ ಹಾದಿಯಲ್ಲಿ

ಅದು ಏನು ಇದು ಎಲ್ಲಿ ಎಂತೆಂಬ ತಿಳಿವಿಲ್ಲದ ತಿರುವಲ್ಲಿ

ಹಾರಿಸುವುದಿಲ್ಲವೆ ಬಾವುಟ ಯಾರೋ ಕಟ್ಟಿದ ದೇಶದಲ್ಲಿ

 

ಎಂಥ ಎಳೆಗಳ ಆಯ್ದು ಯಾರೋ ಹಾಕುತ್ತಿದ್ದಾರೆ ದಿನವೂ ರಂಗೋಲಿ

ಕಂಡ ಪಕ್ಷಿಗಳು ಹೇಳುತಿರಬಹುದು ಶಕುನ ಕಥನ ನಿತ್ಯ ಜಾವದಲ್ಲಿ

ದೇವರ ರುಜುವಲ್ಲಿ ಜನರ ಬೀಡು ಬಿಡುವರೇ ದೇವರನ್ನಲ್ಲಿ

 

ದೇವರು ನಮ್ಮೊಳಗೇ ಇರುವಂತೆ ನಾವೂ ಇರಬಹುದು ಅಲ್ಲಿ ಕಾಣದಂತೆ

ಇಲ್ಲವೆನ್ನುವ  ಎಅಲ್ಲವೂ ಇರುವಲ್ಲಿ ಇರುವ ನಾವೂ ಇಲ್ಲದಿರುವಂತೆ

ಈ ಎಲ್ಲವೂ ಹೇಳುತ್ತಿವೆ ಈ ಕವಿತೆ ನನ್ನದಲ್ಲವಂತೆ

 

- ಜಿ.ಕೆ. ರವೀಂದ್ರಕುಮಾರ್

 
 
 

Recent Posts

See All
ಕಣ್ಣು ಕಟ್ಟಿನ ಆಟ

ಒಂದೊಂದು ಅಕ್ಷರ ನಾಪತ್ತೆಯಾದ ಪದಗಳನ್ನೂ ಸರಿಯಾಗಿಯೇ ಓದಿಬಿಡುತ್ತೇವೆ ಅಕ್ಷರಗಳನ್ನೇ ತಿರುವು ಮುರುವಿಟ್ಟು ಪದ ಹುಡುಕಲು ತಿಣುಕುತ್ತೇವೆ ಎಡದಿಂದ ಬಲಕ್ಕೆ ಮೇಲಿಂದ ಕೆಳಕ್ಕೆ ಇಲ್ಲದ ಪದಗಳ ಜೋಡಿಸುತ್ತೇವೆ ಒಂದೊಂದು ಗುಣ ನಾಪತ್ತೆಯಾದ ಮನುಷ್ಯರನ್ನ

 
 
 
ಚೂರು ಪಾರು ಚರಿತೆ

ಎಷ್ಟೇ ಬಳಿ ಬಳಿದು ನೆಕ್ಕಿದರೂ ಅಷ್ಟಿಷ್ಟು ಉಳಿಯುವ ಸಾರು ತಟ್ಟೆಯಲ್ಲಿ ಎಷ್ಟೇ ಎಳೆದೆಳೆದು ಚೀಪಿದರೂ ಚೂರು ಪಾರು ಬೆರಳಿನಲ್ಲಿ ನಾಕಾರು ಇರುವೆಗಳಿಗೆ ವಾರಕ್ಕಾಗುವಷ್ಟು...

 
 
 
ಹಾಕಿ ಹಾಕಿ

ಒಂದು ಹಾಲಲ್ಲಾದರೂ ಹಾಕಿ ನೀರಲ್ಲಾದರೂ ಹಾಕಿ ಮೊದಲು ಒಂದು ಗೋಲು ಹಾಕಿ ಆಗ ಹೀಗಿರಲಿಲ್ಲ ಧ್ಯಾನವಿದ್ದ ಕಾಲದಲ್ಲಿ ಚಂದ್ರ ನಗುತ್ತಲೇ ಇದ್ದ ಚಂದ್ರ ನಗದಿದ್ದರೇನು...

 
 
 

Comments


©2021 by G K RAVEENDRAKUMAR. Proudly created with Wix.com

bottom of page