ಕಥಾಸರಿತ್ಸಾಗರ
- ಜಿ.ಕೆ.ರವೀಂದ್ರಕುಮಾರ್
- Apr 21, 2024
- 1 min read
Updated: Jun 25, 2024
ಪ್ರತಿ ಅಕ್ಷರವೂ ಏನೋ ಹೇಳಬೇಕೆಂದು ಬರುವಲ್ಲಿ
ಏನೆಂದುಕೇಳದೆ
ನನ್ನ ಕಥೆ ಹೇಳಲು ಬಳಸಿಕೊಂಡ ನನಗೆ
ಎಂದಾದರೂ ಒಂದು ದಿನ ಅವುಗಳ ಕಥೆ ಕೇಳಬಹುದು ಎಂದು
ನನ್ನ ಹಸಿವ ಹಿಂಗಿಸುವ ಭರದಲ್ಲಿ
ಒಂದು ತುತ್ತಿನ ಕಥೆಯನ್ನೂ ಕೇಳಲಾಗಿಲ್ಲ ಇದುವರೆಗೂ
ನನಗಾಗಿ ತೇದ ಪೆನ್ನು ರಿಫಿಲ್ಲುಗಳಿಗೆ
ಧನ್ಯವಾದ ಅರ್ಪಿಸದೆ ಬಿಸಾಕಿದ ವಿಷಾದವೆ ತುಂಬಿಕೊಂಡು
ಅಕ್ಷರದ ಚಡಪಡಿಕೆಯಲ್ಲಿ ಪದಗಳು ಬಾಳಿ
ತೆತ್ತ ತುತ್ತುಗಳಲ್ಲಿ ಔತಣವು ಕೂಡಿ
ಯಾರೋ ಹೋಗಿ ಏನೋ ಬಾಳಿ
ಕಥೆಯೊಳಗೆ ವಾಕ್ಯದೊಳಗೆ ಪದ ಅಕ್ಷರದೊಳಗೆ
ಅನ್ನದೊಳಗೆ ಅಗುಳಿನೊಳಗೆ ತುತ್ತು ಹಸಿವಿನೊಳಗೆ
ಇಂಗಿ ಇರುಕಿ ಇಳಿದು ಇರುವಂಥ ಹೊತ್ತಿನಲ್ಲಿ
ಚರಿತೆಯನು ಕೆತ್ತಿ
ಕೆತ್ತಿಸಿಕೊಂಡ ಚರಿತೆಗಳಲ್ಲಿ ಇರುಕಿದ ಕಥೆಗಳ ಹುಡುಕಲು
ಹೊರಟ ಎಲ್ಲರೂ ಅವರ ಕಥೆಗಳ ಹೇಳುತ್ತ
ಕೈಯೊಳಗಿನ ಪರಿಕರಗಳು ತಮ್ಮ ಕಥೆ ಹೇಳುತ್ತ
ಇಟ್ಟ ಹೆಜ್ಜೆ ಊರಿದ ನೆರಳು ತುಳಿಸಿಕೊಂಡ ನೆಲ
ಎಲ್ಲವೂ ಕಥೆಗಳ ಪೇರಿಸುತ್ತ
ಕಥಾಸರಿತ್ಸಾಗರವ ದಾಟದೆ
ದಿನ ಮುಟ್ಟಿ ಕಾಲ ದಾಟುವುದು ಎಲ್ಲಿ?
ಮಣ್ಣಾಗುವ ಎಲ್ಲವೂ ಕಲ್ಲ ಕಥೆಯಾಗಿ ಬಾಳಲು
ನಿಂತ ಕಲ್ಲುಗಳು ಮಾತ್ರ ಒಂಟಿ ಒಂಟಿ ಮುಂದೆಯೂ
ಮುಗಿದ ಸಾಮ್ರಾಜ್ಯದ ಮೆಲುಕಲ್ಲಿ
ಅವೇ ಅಕ್ಷರಗಳು ಉರುಳಿ
ಅವೇ ಕಥೆಗಳು ಕರಗಿ
ಮತ್ತೆ ತಳೆದ
ನಾನು ಯಾವ ಕಥೆಯ ಪುರಾತನ ಸಾಕ್ಷಿಯೋ
ವರ್ತಮಾನದ ಭಿಕ್ಷೆಯೋ
ನಾಳಿನ ಹಸಿವೆಯೋ
ಕಥೆಯ ಜಂಗುಳಿಯಲ್ಲಿ ಒಂದನೊಂದ ದಾಟಿ ತಳ್ಳಿ
ಈ ಕಥೆಯ ಪಾತ್ರ ಅಲ್ಲಿ
ಆ ಕಥೆಯ ಪಾತ್ರ ಇಲ್ಲಿ
ಶುರುವಾದ ಕಥೆಯಲ್ಲಿ ಇದ್ದವರು ಈಗ ಎಲ್ಲಿ?
ಸಾಕು ಪ್ರಶ್ನೆಯ ಮಾಲೆ
ಲೈಟ್ಸ್ ಆನ್ ಆದವು ಸುಮ್ಮನಿರಿ|
ಈಗೇನಿದ್ದರೂ ಬರೀ ಚಿತ್ರಕಥೆ
ಅಂತೆ
-ಜಿ.ಕೆ. ರವೀಂದ್ರಕುಮಾರ್