top of page
Search

ಸಾವಯವ ಸುಪಾರಿ

  • ಜಿ.ಕೆ.ರವೀಂದ್ರಕುಮಾರ್
  • Apr 21, 2024
  • 1 min read

Updated: Jun 25, 2024



ಕೊಲ್ಲಲು ದುಡ್ಡು ಕೊಟ್ಟರೆ ಸುಪಾರಿ

ಕೊಲ್ಲುವ ಕಥೆಗೆ ದುಡ್ಡು ಕೊಟ್ಟರೆ ಪ್ರಾಯೋಜನೆ

ಕಥೆ ನೋಡಿ ಸುಮ್ಮನಿದ್ದರೆ ಮನರಂಜನೆ

ಕೊಲ್ಲಲು ತೀರ್ಮಾನಿಸಿದರೆ ಅಪರಾಧ


ಇಂಥ ಕೆಲಸ ಮಾಡುವಾಗ ಮನಸ್ಸಿನೊಳಗೆ

ಸುಪಾರಿಯೂ ಪ್ರಾಯೋಜನೆಯೂ ಒಂದರೊಳಗೊಂದು ಸೇರಿ

ನಾನು ಅದೇ ಆಗಿರಲಿಕ್ಕಿಲ್ಲ ಎಂದು ಸಮಾಧಾನ ಪಟ್ಟುಕೊಳ್ಳುವಲ್ಲಿ


ಒಳ್ಳೆಯವನಾಗಿದ್ದವನು ಒಳ್ಳೆಯವನಾಗೇ ಉಳಿಯುವ

ಅಚಲ ನಿಷ್ಠೆ ಕಠಿಣ ತಪಸ್ಸು ಕೆಡಿಸುವಂತೆ

ಸದಾ ನುಗ್ಗುವ ಬ್ರೇಕಿಂಗ್ ನ್ಯೂಸ್

ಹತ್ಯೆ ಹಾದರ ವಂಚನೆ ನೋಡುತ್ತ ಕೇಳುತ್ತಲೂ

ಒಳ್ಳೆಯವನಾಗಿರುವುದೆಂದರೆ ಸುಲಭದ ಮಾತಲ್ಲ


ಇತ್ತೀಚೆಗೆ ಅಹಿಂಸೆ ತಲೆಯೆತ್ತಿ ಮಾತನಾಡುತ್ತಿಲ್ಲ

ಸುಮ್ಮನಿದ್ದರೂ ಏನೊ ಬೇಗುದಿ ಯಾಕೋ

ಮಗ್ಗುಲು ಮುರಿಯುವ ಬಯಕೆ ಬೇಡವೆಂದರೂ

ಬಾಯಿ ಬಿಟ್ಟರೆ ಮಾನನಷ್ಟ ಬಿಡದಿದ್ದರೆ ಮಾನವಂತ

ಹೋಗಿ ಬೆನ್ನು ತಟ್ಟಿ ಬಂದರೆ ಹಾರ್ದಿಕತೆ

ಕೂತೇ ಲೈಕ್ ಮಾಡಿದರೆ ಯಾವುದೋ ಸೆಕ್ಷನ್ನು

ಯೋಗ್ಯರೋ ಅಯೋಗ್ಯರೋ

ಮುಖಕ್ಕೆ ಮಸಿ ಬೀಳುವವರೆಗೆ ಎಲ್ಲರೂ ತತ್ತ್ವಮಸಿಯೇ


ಸಂತೆಯಲ್ಲಿ ಜವಾರಿ ಕೊತ್ತುಂಬರಿ ಸಾವಯವ ತರಕಾರಿ

ಕೊಂಡು ಮನೆಗೆ ಹೋಗುವಾಗ

ಹೀಗೆ ಏನೇನೋ ಆಲೋಚನೆ

ಸಧ್ಯ ನಾನೂ ಜವಾರಿ ಸಾವಯವ

ಇಚ್ಚಿತ ಇಳುವರಿಯ ಕಳ್ಳು ಬಳ್ಳಿ

ಅಲ್ಲಿ ಇಲ್ಲಿ ದಾರಿಮಾಡಿಕೊಂಡು ಹಬ್ಬಿ

ಹೀಗೇ ತಿನ್ನುವ ಮೊದಲು ಸ್ವಲ್ಪ ಸಾಧಕ ಬಾಧಕ ಚಿಂತನೆ

ತುಪ್ಪ ತಟ್ಟೆಗೆ ಬೀಳುವುದೇ ತಡ..


ಇರಲಿ ಯಾಕೆ ಅದೂ ಇದೂ

ಊಟ ಆಯಿತಲ್ಲ ಬಿಡಿ

ಈಗೇನಿದ್ದರೂ ಪಾನು ಸುಪಾರಿ

ಇನ್ನು ನೀವು ಯಾರೋ ನಾವು ಯಾರೋ

ಮುಂದೆ ಅಗತ್ಯ ಬಿದ್ದರೆ ಹೇಗೂ

ನಿಮ್ಮ ಹೆಸರು ನಮ್ಮ ಮನದಲ್ಲಿದೆ

ನಮ್ಮ ಹೆಸರು ನಿಮ್ಮ ಮನದಲ್ಲಿದೆ

ಚಿಂತೆ ಯಾಕೆ ಎಲ್ಲವೂ ತೆರೆದ ಅಂಚೆ


-ಜಿ.ಕೆ. ರವೀಂದ್ರಕುಮಾರ್


 
 
 

Recent Posts

See All
ಕಣ್ಣು ಕಟ್ಟಿನ ಆಟ

ಒಂದೊಂದು ಅಕ್ಷರ ನಾಪತ್ತೆಯಾದ ಪದಗಳನ್ನೂ ಸರಿಯಾಗಿಯೇ ಓದಿಬಿಡುತ್ತೇವೆ ಅಕ್ಷರಗಳನ್ನೇ ತಿರುವು ಮುರುವಿಟ್ಟು ಪದ ಹುಡುಕಲು ತಿಣುಕುತ್ತೇವೆ ಎಡದಿಂದ ಬಲಕ್ಕೆ ಮೇಲಿಂದ ಕೆಳಕ್ಕೆ ಇಲ್ಲದ ಪದಗಳ ಜೋಡಿಸುತ್ತೇವೆ ಒಂದೊಂದು ಗುಣ ನಾಪತ್ತೆಯಾದ ಮನುಷ್ಯರನ್ನ

 
 
 
ಚೂರು ಪಾರು ಚರಿತೆ

ಎಷ್ಟೇ ಬಳಿ ಬಳಿದು ನೆಕ್ಕಿದರೂ ಅಷ್ಟಿಷ್ಟು ಉಳಿಯುವ ಸಾರು ತಟ್ಟೆಯಲ್ಲಿ ಎಷ್ಟೇ ಎಳೆದೆಳೆದು ಚೀಪಿದರೂ ಚೂರು ಪಾರು ಬೆರಳಿನಲ್ಲಿ ನಾಕಾರು ಇರುವೆಗಳಿಗೆ ವಾರಕ್ಕಾಗುವಷ್ಟು...

 
 
 
ಮರವನಪ್ಪಿದ ಬಳ್ಳಿ

ಮರವನಪ್ಪಿದ ಬಳ್ಳಿಯನ್ನುಯನ್ನು ಮರವೇ ಅಪ್ಪಿರಬಹುದು ಹಾಗೂ ಇರಬಹುದು ಹೀಗೂ ಇರಬಹುದು ಭಾಷೆಯಿಲ್ಲದ ಜೀವಗಳು ದಾವೆ ಹೂಡಲಾರವು ಎದೆ ಕೊರಳು ಗಲ್ಲ, ಬೆನ್ನು ಆತುಕೊಳ್ಳುವ...

 
 
 

Comments


©2021 by G K RAVEENDRAKUMAR. Proudly created with Wix.com

bottom of page